Sunday 15 April 2012

ಮನಸ್ಸಿನ ಸೇತುವೆ


ಅವೆರಡು ಊರುಗಳ ಮಧ್ಯೆ ಉದ್ದಕ್ಕೆ ಗೆರೆ ಎಳ್ದಂಗೆ ಕಾವೇರಿ ಹೊಳೆ ಹರ್ದದೆ. ಗ್ರಹಚಾರ ನೋಡಿ.. ಈ ಭಾಗಲೇ ಹೊಳೆ ತುಂಬಾ ಆಳ ಇರ್ದು. ಹಂಗಾಗಿ ಈ ಊರಿನವು ಆ ಊರಿಗೂ, ಆ ಊರಿನವೂ ಈ ಊರಿಗೂ ಬಾಕೆ ಆತಿತ್ಲೆ. ಅದೆಂಥ ದ್ವೇಷನೋ ! ಬಹುಶ: ಮಹಾಭಾರತ ಕಾಲಲಿ ಪಾಂಡವರು ಮತ್ತೆ ಕೌರವರಿಗೂ ಇಂಥ ದ್ವೇಷ ಇದ್ದಿರಿಕ್ಕಿಲ್ಲೆ. ಅಂಥ ದ್ವೇಷ ಈ ಎರಡು ಊರಿನವರ ಮಧ್ಯೆ ಇತ್. ಇನ್ನು ಕೊಡುವ, ತರ್ವ ಮಾತಂತೂ ಊಹಿಸಿಕಣಿಕೇ ಆದುಲ್ಲೆ.  ಈ ಕಡೆ ಊರಿನವ್ಕೆ ಹತ್ತಿರದ ಪೇಟೆ ಚೇರಂಬಾಣೆ. ಇನ್ನು ಆ ಕಡೆ ಊರಿನವ್ಕೆ ಹತ್ತಿರ ಇರ್ವ ಪೇಟೆ ನಾಪೋಕ್ಲು. ಆಕಸ್ಮಾತ್ ಈ ಎರಡು ಊರಿನವರ ಪೈಕಿ ಯಾರಾದ್ರೂ ಎದುರು ಬದುರು ಆದೋತಾ ಹೇಳಿರೆ, ಅಲ್ಲೊಂದು ದೊಡ್ಡ ಜಗಳ ಗ್ಯಾರಂಟಿ. ಅಂಥ ಎಷ್ಟು ಜಗಳದಲ್ಲಿ ಸುರ್ದ ರಕ್ತ ಕಾವೇರಿಲಿ ಸೇರಿ ಹೋಗ್ಯುಟ್ಟೋ ಏನೋ...ಈ ಜಗಳಂದಾಗಿನೇ ಈ ಎರಡೂ ಊರುಗಳ ಮಧ್ಯೆ ಇನ್ನೂ ಒಂದು ಸೇತುವೆ ಬಂದಿತ್ತ್ಲೆ. 
ಎರಡೂ ಶ್ರೀಮಂತ ಊರುಗ. ಕಾವೇರಿ ಹೊಳೆ ಬದಿ ಗದ್ದೆ, ಸ್ವಲ್ಪ ಒಳಗೆ ಹೋದ್ರೆ ಕಾಫಿ ತೋಟಗ.... ಹಂಗಾಗಿ ಬದುಕಿಗೆ ಏನೇ ಕೊರತೆ ಇತ್ಲೆ. ಇದ್ದ ಕೊರತೆ ಒಂದೇ ಒಂದು, ಅದ್ ಸಾಮರಸ್ಯ ! ಇಲ್ಲೂ ಲವ್ವರ್ಗ ಇದ್ದೊ... ಆದ್ರೆ ಆ ಲವ್ ಮದುವೆ ವರೆಗೆ ಹೋದ ಉದಾಹರಣೆನೇ ಇಲ್ಲೆ. ಪ್ರೇಮಿಗಳ ಪೈಕಿ ಇಬ್ಬರಲ್ಲಿ ಒಬ್ಬ ಯಾರಿಗೂ ಗೊತ್ತಾಗದೇ ಕಾಣೆಯಾಗಿಬಿಡ್ತಿದ್ದೊ. ಕಾವೇರಿ ಹೊಳೇಲಿ ಹೆಣ ಸಿಕ್ಕಿಕಾಕನನೇ ಗೊತ್ತಾಗ್ತಿದ್ದದ್, ಓಹೋ ಇಲ್ಲೊಂದು ಕೊಲೆ ಆಗಿ ಉಟ್ಟುತಾ.. ! 
ಅನಿ ಈಕಡೆ ಊರಿನ ಭೀಮಯ್ಯನ ಮಂಙ. ಅವ್ವಿ ಆಕಡೆ ಊರಿನ ಗೋಪಾಲನ ಮಗಳು. ಇಬ್ಬರದ್ದೂ ಹೊಳೆ ಕರೆ ಮನೆ. ಅನಿ ಕಿಟಕಿ ಹತ್ರ ನಿಂತ್ಕಂಡ್ ನೋಡಿರೆ, ಆ ಕಡೆ ಬದಿಲಿ ಅವ್ವಿ ಕುದ್ದಕಂಡ್ ತಲೆ ಬಾಚುದು ಕಾಣ್ತಿತ್. ಆದ್ರೂ ಎರಡೂ ಮನೆಯವ್ಕೂ ಮಾತಿಲ್ಲೆ..ಕಥೆಯಿಲ್ಲೆ.. ಕಾರಣನೂ ಗೊತ್ಲೆ. ಅನಿ ಚೇರಂಬಾಣೆ ಕಾಲೇಜಿಗೆ ಹೋದ್ರೆ, ಅವ್ವಿ ನಾಪೋಕ್ಲು ಕಾಲೇಜು. ಇಬ್ಬರದ್ದು ಹೊಳೆಬದಿಲಿ ದಾರಿ. ಇಬ್ಬರೂ ದಿನಾ ಒಂದೇ ಟೈಮಿಗೆ ಹೊರಟವೆ. ಇಂವ ಈಕಡೆ ದಾರಿ, ಅವ್ಳು ಆಕಡೆ ದಾರಿ ! ಹಂಗೆ ಒಂದು 2 ಕಿಲೋಮೀಟರ್ ನಡ್ದ ಮೇಲೆ, ಅನಿ ಎಡಕ್ಕೆ ತಿರುಗಿ ಚೇರಂಬಾಣೆಗೆ ಹೋದೆ. ಅವ್ವಿ ಬಲಕ್ಕೆ ತಿರಗಿ ನಾಪೋಕ್ಲಿಗೆ ಹೋದೆ. ಇಬ್ಬರೂ ಒಬ್ಬರಿಗೊಬ್ಬರು ನೋಡಿಕಂಡವೆ. ಸಣ್ಣ ನಗು ವಿನಿಮಯ ಆದೆ. ಆದ್ರೆ ಇಬ್ಬರೂ ಮಾತಾಡುವ ಧೈರ್ಯ ಮಾತ್ರ ತೋರಿಸಿತ್ಲೆ.
ಹೋಬಳಿ ಮಟ್ಟದ ಸ್ಪೋಟ್ಸರ್್ ನಡೆಯುದು ನಾಪೋಕ್ಲುಲಿ. ಅನಿ ಒಳ್ಳೇ ಓಟಗಾರ. ಹಂಗೆ ಅಂವ ಅವನ ಕಾಲೇಜಿಂದ ನಾಪೋಕ್ಲುಗೆ ಹೋಗಿತ್ತ್. ಇನ್ನು ಅವ್ವಿ ಖೋಖೋ ಆಟಗಾರ್ತಿ.  ಹಿಂಗಿರ್ಕಾಕನ ಅನಿಗೆ ಒಂದು ಸಣ್ಣ ಆಸೆ... ಹೆಂಗಾರೂ ಮಾಡಿ ಅವ್ವಿನ ಮಾತಾಡಿಸೋಕು ! ಅವ್ವಿಗೆ ಆಗ್ಲೇ ಅನಿ ಮೇಲೆ ಲವ್ ಹುಟ್ಟಿಬಿಟ್ಟಿತ್. ಇದ್ನ ಅನಿಗೆ ಹೇಳೊಕೂತ ಅವ್ಳೂ ಕಾಯ್ತಿತ್ ! ಕೊನೆಗೂ ಆ ಕ್ಷಣ ಬಂದೇ ಬಿಡ್ತ್. ನೂರು ಮೀಟರ್ ಓಟಲಿ ಫಸ್ಟ್ ಬಂದಿದ್ದ ಅನಿ ಫ್ರೈಜ್ ತಕ್ಕಂಡ್ ಇತ್ತ ಬಾಕಾಕನ, ಅವ್ವಿ ಧೈರ್ಯ ಮಾಡಿ ಹೋಗಿ ಅವಂಗೊಂದು ಷೆಕ್ಹ್ಯಾಂಡ್ ಕೊಟ್ಟ್ ಕಂಗ್ರಾಟ್ಸ್ ಹೇಳಿಬಿಟ್ಟತ್. ಅನಿಗೆ ಸ್ವರ್ಗಕ್ಕೆ ಮೂರೇ ಗೇಣು ! ಆದ್ರೆ ಇಬ್ಬರೂ `ಐ ಲವ್ ಯೂ' ತಾ ಮಾತ್ರ ಹೇಳ್ತ್ಲೆ.
ಇತ್ತ ಮನೆಗೆ ಬಂದರೆ ಅವ್ವಿಗೆ ಅನಿದೇ ಗ್ಯಾನ... ಅನಿ ಕಥೆನೂ ಇದಕ್ಕಿಂತ ಬೇರೆ ಇತ್ಲೆ. ಆದ್ರೆ ಮತ್ತೊಮ್ಮೆ ಮತಾಡೋ ಧೈರ್ಯ ಇಬ್ಬರಿಗೂ ಬಾತ್ಲೆ. ಯಾವತ್ತೂ ಒಂದಕ್ಕೊಂದು ಸೇರ್ದುಲ್ಲೆಯೇನೋ ಅನ್ನೋ ಹಂಗೆ ಇರ್ವ ಹೊಳೆ ಬದಿಯ ಆ ಎರಡು ದಾರಿ.. ಆ ದಾರಿಲಿ ಹೋಕಾಕನ ನಗು..ಇಷ್ಟೇ ಇವ್ರಿಬ್ಬರ ಮಧ್ಯೆ ಇದ್ದದ್. ಇಬ್ಬರದ್ದೂ ಪಿಯುಸಿ ಮುಗ್ತ್....ಬೇರೆ ಬೇರೆ ಕಡೆನೇ ಡಿಗ್ರಿ ಮಾಡ್ದೊ... ಇಬ್ಬರಿಗೂ ಬೆಂಗಳೂರ್ಲಿ ಕೆಲ್ಸನೂ ಸಿಕ್ತ್.
ಅದೊಂದು ದಿನ ಅನಿ ಅವ್ನ ಊರು ಹಬ್ಬಕ್ಕೆ ಹೊರಟಿತ್ತ್. ಅದು ರಾತ್ರಿ ಬೆಂಗಳೂರು ಬಿಟ್ಟ್ರೆ ಬೆಳಗ್ಗೆ ಮಡಿಕೇರಿ ತಲುಪ್ವ ಬಸ್. ಇನ್ನೇನು ಬಸ್ ಹೊರಡೋಕು... ಒಂದು ಗೂಡೆ ಓಡೋಡಿ ಬಂದ್ ಬಸ್ ಹತ್ತಿ ಅನಿ ಪಕ್ಕನೇ ಕುದ್ದ್ಕಂಡತ್. ನೋಡಿರೆ... ಅವ್ವಿ ! ಇಬ್ಬರಿಗೂ ಆಶ್ಚರ್ಯ. ತುಂಬಾ ಹೊತ್ತು ಮಾತೆ ಹೊರಟತ್ಲೆ. ಅನಿಯೇ ಮೆಲ್ಲೆ ಶುರು ಮಾಡ್ತ್, `ಹೆಂಗೊಳ ಅವ್ವಿ ?' `ನಾ ಲಾಯ್ಕ ಒಳೆ..ನೀ ಹೆಂಗೊಳ?...' ಹಿಂಗೆ ಶುರುವಾದ ಮಾತು, ಕೆಲಸ, ಕಾಲೇಜು, ಸ್ಪೋಟ್ಸರ್್, ಮೊದಲ ಸಲ ಮಾತಾಡ್ದ್... ನದಿ ಬದಿ ದಾರೀಲಿ ನಗು...ಎರಡು ಊರಿನ ಜಗಳದ ವರೆಗೆ ಬಂದ್ ನಿಂತತ್. `ನಾವೇ ಮುಂದೆ ನಿಂತ್ ಎರಡು ಊರುಗಳ್ನ ಒಂದು ಮಾಡೋಕು.. ಇದು ನಮ್ಮ ಕೈಲಿ ಆದೆನಾ...?' ಅವ್ವಿ ಪ್ರಶ್ನೆ. ಅದಕ್ಕೆ ಅನಿ ಉತ್ತರ...`ನಾವಿಬ್ಬರು ಮದ್ವೆಯಾದರೆ ಖಂಡಿತ ಆದೆ...' ಹಿಂಗೆ ಅವು ಬಸ್ಲಿ ಬಾಕಾಕನನೇ ಮದುವೆ ವಿಷಯ ಮಾತಾಡಿಕಂಡೊ. ಏನು ಬೇಕಾರೂ ಆಗಲಿ ಇಬ್ಬರು ಮದುವೆ ಆಕುತಾ ಡಿಸೈಡ್ ಮಾಡ್ಡೊ...ಅವ್ವಿಗೆ ಒಂಥರ ಸಮಾಧಾನ ಆತ್. ಅನಿಗೆ ಹೆಗಲಿಗೆ ಒರಗಿ ನೆಮ್ಮದಿಯ ನಿದ್ದೆ ಮಾಡ್ತ್....
ಅಂದ್ ಅನಿ ಊರುಲಿ ಹಬ್ಬ. ಮಡಿಕೇರಿ ಎಂಎಲ್ಎ ಮುಖ್ಯ ಅತಿಥಿಯಾಗಿ ಬಂದಿದ್ದೊ. ಅಂದ್ ಇನ್ನೂ ಒಂದು ಮುಖ್ಯ ಕಾರ್ಯಕ್ರಮ ಇತ್. ಅದ್ ಸೇತುವೆ ಕೆಲ್ಸಕ್ಕೆ ಗುದ್ದಲಿ ಪೂಜೆ ! ಹೌದು ಎರಡೂ ಊರಿನ ಮಧ್ಯೆ ಒಂದು ಸೇತುವೆನ ಸರ್ಕಾರ ಮಂಜೂರು ಮಾಡಿತ್ತ್. ಇನ್ನು ಜನರ ಮನಸ್ಸುಗಳ ಮಧ್ಯೆ ಸೇತುವೆ ಕಟ್ಟಿಕೆ ಮಾತ್ರ ಬಾಕಿ ಇದ್ದ್. ಆ ಕೆಲ್ಸನ ಅನಿ ಮತ್ತೆ ಅವ್ವಿ ಮಾಡಿವೆ ಬಿಡಿ....
- `ಸುಮಾ' 

No comments:

Post a Comment